ಶನಿವಾರ, ನವೆಂಬರ್ 14, 2009

KALIYUGADA KALAAVAMSHI DADA SAHEB PAALKE PRASHASTI VIJETA DR|| RAJ KUMAR



ಕಲಿಯುಗದ  ಕಲಾವಂಶಿ  ಡಾ|| ರಾಜ್ ಕುಮಾರ್  











ಕನ್ನಡ  ಅಕ್ಷರ ಸುಂದರ...
ಭಾಷೆ ಸುಂದರ ...
ನುಡಿ ಸುಂದರ ...
ನಡೆ ಸುಂದರ ... 
ಅರ್ಥವಂತು ಶೀಘ್ರ ಸುಂದರ 
ಎಲ್ಲೇ ಇರು, ಹೇಗೆ ಇರು..
ಎಂದೆಂದಿಗೂ ನೀ ಕನ್ನಡವಾಗಿರು 
ಈ ಕಲಾ ಶಿಕ್ಷಣವು ಮಕ್ಕಳಿಗೆ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ-೨೦೦೯ ರ ಕೊಡುಗೆ.  


ನನ್ನ  ಅಭ್ಯಾಸ ..............
               ನನ್ನ  ಚಟುವಟಿಕೆ ........
ನನ್ನ  ವೃತ್ತಿ ..................
                ನನ್ನ  ಕರ್ತವ್ಯ ..........
ನನ್ನ  ಗುರಿ ...................
                 ನನ್ನ  ಸಾಧನೆ .........
ನನ್ನ ಜೀವನ
...................
                  ನನ್ನ  ನಡವಳಿಕೆ .......
 ನನ್ನ ಅರೋಗ್ಯ ...................
                   ನನ್ನ  ಮುಂಜಾಗ್ರತ ಕ್ರಮ
    ವ್ಯಕ್ತಿಯು  ತನ್ನ  ಬದುಕಿನಲ್ಲಿ  ನಿತ್ಯ  ಸಾಂದರ್ಭಿಕ  ಸಮಸ್ಯೆಗೆ  ಪರಿಹಾರ  ಕಂಡುಕೊಳ್ಳದೆ, ಸಮಯ  ಮೀರಿದ  ನಂತರ  ಪರಿತಪಿಸುವುದು  ಯೋಚನೆ  (ಚಿಂತೆ ), ಸಮಯಕ್ಕಿಂತ  ಮುಂಚೆಯೇ  ಸಾಂದರ್ಭಿಕ  ಸಮಸ್ಯೆಯ  ಬಗ್ಗೆ  ಅವಶ್ಯ  ಪರಿಹಾರ  ಕಂಡುಕೊಳ್ಳಲು  ವಿಚಾರ  ಮಾಡುವುದು  ಆಲೋಚನೆ, ಆದರೆ ಈ  ಆಲೋಚನೆಯೂ  ಪರಿಪೂರ್ಣತೆಯನ್ನು  ಹೊಂದಿರಬಹುದು  ಇಲ್ಲವೇ  ಹೊಂದುವಲ್ಲಿ  ವಿಫಲವಾಗಿ  ತನ್ನ  ಗುರಿ  ತಲುಪಲು ಈ   ಆಲೋಚನೆಯೂ  ನಿರುಪಯೋಗಿಯಾಗಬಹುದು. ಆದರೆ  ಸಮಯಕ್ಕಿಂತ  ಮುಂಚೆಯೇ  ಸಾಂದರ್ಭಿಕ  ಸಮಸ್ಯೆಯ  ಬಗ್ಗೆ  ಪರಿಹಾರ  ಕಂಡುಕೊಳ್ಳುವುದರ  ಜೊತೆಗೆ, ಕಂಡುಕೊಂಡ  ಪರಿಹಾರದಿಂದ  ಮುಂದೆ  ಆಗುವ  ಪರಿಣಾಮ, ದುಷ್ಪರಿಣಾಮದ  ಬಗ್ಗೆಯೂ  ವಿಚಾರ  ಮಾಡಿ  ತನ್ನ  ವ್ಯಕ್ತಿತ್ವವನ್ನೇ  ಪರಿವರ್ತಿಸಿಕೊಳ್ಳಲು  ನಡೆಸುವ  ಪ್ರಯತ್ನವೇ  ಚಿಂತನೆ. ಆದರೆ  ಚಿಂತೆಯಿಂದ     ಚಿತೆಯಾಗುವುದಕ್ಕಿಂತ  ಮುಂಚೆಯೇ  ಚಿಂತನೆಯಿಂದ  ಉತ್ತಮ  ಚಿತ್ತಾರದ  ಬದುಕಿನತ್ತ  ಸಾಗುವುದು  ಲೇಸು. ಆದರೆ  ಈ  ಪದಗಳು  ಬದುಕಿನ  ಅನೇಕ  ಸಂದರ್ಭಲ್ಲಿ  ಒಂದು  ನಿರ್ಧಿಷ್ಟ  ಅರ್ಥದಲ್ಲಿ  ಬಳಕೆಯಾಗುತ್ತಿಲ್ಲ.

    ಆತುರದ  ಮನಸ್ಸು  ತನ್ನ  ಯಾವುದೇ  ಕೆಲಸ  ಕಾರ್ಯಗಳಲ್ಲಿ  ಆಸಕ್ತಿ   ಹೊಂದಿದ್ದರೂ, ಆ  ಆಸಕ್ತಿಯಲ್ಲಿ  ತಾನು  ಮಾಡುತ್ತಿರುವ  ಕೆಲಸದ  ಪರಿಣಾಮದ  ಬಗ್ಗೆ  ತನ್ನ  ಮನಸ್ಸನ್ನು  ಹರಿಬಿಡದೆ, ತಾನು  ಮಾಡುತ್ತಿರುವ  ಕೆಲಸವೇ  ಸರಿ, ತನ್ನ  ಆಲೋಚನೆಯೇ  ಸರಿ, ತನ್ನ  ನಿರ್ಧಾರವೇ  ಸರಿ  ಎಂದು  ಮಾನಸಿಕವಾಗಿ  ಹಿಗ್ಗುತ್ತಾ  ತನ್ನ  ಕೆಲಸದ  ಬಗ್ಗೆ  ಮಾತ್ರ  ಗಮನವಿರಿಸುವುದು  ಮತ್ತು  ತಾನು  ಮಾಡಿದ  ಕೆಲಸ  ಪೂರ್ಣಗೊಂಡಿತೆಂದು  ತನ್ನಷ್ಟಕ್ಕೆ  ತಾನೆ  ತೃಪ್ತಿ ಪಡುವುದು ಇದು  ಅನೇಕ  ವ್ಯಕ್ತಿಗಳ  ದೈನಂದಿನ  ಕೆಲಸಗಳಲ್ಲಿ  ಆಗುವ  ಅನುಭವ, ಅಂದರೆ  ಈ  ಅನುಭವವು  ಯಾವುದೇ  ವೃತ್ತಿ, ಉದ್ಯಮಿ, ರಾಜಕಾರಣಿ, ಅಥವಾ  ಕಾರ್ಮಿಕ, ಅಧ್ಯಾಪಕ, ರೈತ  ಇಲ್ಲವೇ  ಗೃಹ ಕೆಲಸದವರಾಗಿರಬಹುದು  ಅಥವಾ  ಚಲನಚಿತ್ರ, ದೂರದರ್ಶನ  ಪ್ರಸಾರ, ಪತ್ರಿಕಾ  ಮಾಧ್ಯಮ ಇತ್ಯಾದಿ  ಯಾವುದೇ  ಕ್ಷೇತ್ರದಲ್ಲಿ  ಕರ್ತವ್ಯ  ನಿರ್ವಹಿಸುವ  ವ್ಯಕ್ತಿಗೂ  ಹೊರತಲ್ಲ. ಇಂತಹ  ಒಂದು  ಆತುರದ  ನಿರ್ಧಾರದಿಂದ  ತಾನು  ಮಾಡುತ್ತಿರುವ  ಕರ್ತವ್ಯದ  ಪರಿಣಾಮದಿಂದ  ವಿನಾಶ  ಇಲ್ಲವೇ  ದುಷ್ಪರಿಣಾಮ ಬೀರಬಹುದು  ಹಾಗೆಯೆ  ಇದೇ  ಚಿಂತೆಗೆ  ಗುರಿಯಾಗಬಲ್ಲದು.

    ಆದರೆ  ಮಕ್ಕಳಿಗೆ  ಈಗಿನ  ಶಿಕ್ಷಣ  ಕ್ಷೇತ್ರಕ್ಕಿಂತಲೂ   ಮಾಧ್ಯಮಗಳನ್ನು  ಅನುಕರಿಸುವ  ಮೂಲಕ  ಹೆಚ್ಚಿನ  ಜ್ಞಾನ  ಅಭಿವೃದ್ಧಿಯನ್ನು  ಸುಲಭ  ರೂಪದಲ್ಲಿ  ಪಡೆಯಲು  ಪತ್ರಿಕೆಗಳು, ಆಕಾಶವಾಣಿ, ದೂರದರ್ಶನ  ಇತ್ಯಾದಿ  ಇವು  ಅನುಕೂಲಕರ  ವ್ಯವಸ್ಥೆಯಂತೆ  ಸೃಷ್ಟಿಯಾಗಿದ್ದರೂ, ಇವುಗಳಲ್ಲಿಯ  ಕೆಲವು  ಮಾಧ್ಯಮ  ವಿಭಾಗಗಳ  ಕೀಳುಮಟ್ಟದ  ಮನರಂಜನೆಯ  ಪ್ರಸಾರದಿಂದ  ಅಲ್ಲದೆ  ಕೀಳು  ಮಟ್ಟದ  ಚಲನಚಿತ್ರಗಳ  ಮನರಂಜನೆಗಳು  ಅನುಕರಣೆಯಾಗಿ  ವಿಧ್ಯಾರ್ಥಿಗಳನ್ನು  ಪ್ರೆಮಾರ್ಥಿಗಳನ್ನಾಗಿ  ರೂಪಿಸಲು  ಕಾರಣವಾಗುತ್ತಿರುವುದು  ವಿಪರ್ಯಾಸವೇ  ಸರಿ. ಇವು  ಕೇವಲ  ಸುದ್ಧಿ  ಮತ್ತು  ಮನರಂಜನೆಯಾಗಿರದೆ  ಮನಃ ಪೂರ್ವಕವಾಗಿ  ಮಾನಿತ  ಅಭಿರುಚಿಯನ್ನು  ತರುವಂತಹ  ಪ್ರಸಾರದಿಂದ  ಎಲ್ಲ  ಮಾಧ್ಯಮಗಳು  ಕೂಡ  'ಕಲಾಶಿಕ್ಷಣ' ದ  ರೂಪದಂತೆ  ಶೈಕ್ಷಣಿಕ  ಕ್ಷೇತ್ರದ  ಒಂದು  ಅಂಗದಂತೆಯೂ  ಆಗಬಹುದಾಗಿದೆ. ಇಂಥಹ  ಪ್ರಯತ್ನದತ್ತ  ಸಾಗುತ್ತಿರುವ  ಒಂದೇ  ಒಂದು  ಪತ್ರಿಕೆ ಎಂದರೆ  ಅದು  'ವಿಜಯ  ಕರ್ನಾಟಕ' ಎಂದರೆ  ತಪ್ಪಾಗಲಾರದು .

    ಕಲೆ  ಮನ  ಪರಿವರ್ತಿಸುವ  ಪ್ರಕ್ರಿಯೆ, ಪರಿವರ್ತಿಸುವ  ಕ್ರಿಯೆ  ಪರಿಪೂರ್ಣತೆಯಿಂದ ಕೂಡಿರಬೇಕು, ವ್ಯಕ್ತಿಯ  ಭಾವನ  ರೂಪಕ್ಕೆ  ಒಂದು  ನೆಲೆಯಿಲ್ಲ, ಮಿತಿಯಿಲ್ಲ, ಪರಿಪೂರ್ಣತೆಯ  ಸ್ವರೂಪವು  ಇಲ್ಲ, ಮನಸ್ಸು  ಹಲವು  ವಿಚಾರ  ರೂಪದಲ್ಲಿ  ಸಂಚರಿಸಿ, ಚಿಂತನೆಯ   ಮೂಲಕ  ಒಂದು  ಚತುರ ಕ್ರಿಯೆಯನ್ನು  ನಡೆಸುವ  ಸಮೂಹ  ರೂಪ. ಚತುರ  ಕ್ರಿಯೆಗಳಿಂದ  ಸೃಷ್ಟಿಸಲ್ಪಡುವ  ಯಾವುದೇ  ಕಲಾಕೃತಿಗಳು  ಪ್ರವೃತ್ತಿ  (ಅನಂದಕ್ಕಾಗಿ) ಯಾಗಿರಬಹುದು. ವೃತ್ತಿ  (ಅನುಕೂಲಕ್ಕಾಗಿ) ಯಾಗಿರಬಹುದು, ಸಂಸ್ಕೃತಿ  (ಆಚರಣೆಗಾಗಿ) ಯಾಗಿರಬಹುದು  ಇಲ್ಲವೇ  ಇವು  ಮೂರೂ  ಕ್ರಿಯಾ  ವಿಧಾನಗಳ  ಸಂಯೋಜನೆಯೊಂದಿಗೆ  ಒಂದು  ಪರಿಪೂರ್ಣ  ಕಲಾಕೃತಿಯಾಗಿ  ಸೃಷ್ಟಿಯಗಿರಬಹುದು. ಹೀಗೆ  ಸೃಷ್ಟಿಯಾದ  ಕಲಾಕೃತಿಯೇ  ಪ್ರತಿ  ವ್ಯಕ್ತಿಯನ್ನು  ಮೆಚ್ಚುಗೆಯೊಂದಿಗೆ  ಗೆಲ್ಲಬಹುದು. ಸದಾಕಾಲ  ಗೌರವಾನ್ವಿತವಾಗಿ   ಅಚ್ಚಳಿಯದೆ  ಎಲ್ಲರ  ಮನಸ್ಸಿನಲ್ಲಿ  ಉಳಿಯಲು  ಸಾಧ್ಯ. ಆದ್ದರಿಂದಲೇ  ಕನ್ನಡ  ಚಲನಚಿತ್ರದಲ್ಲಿ  ಇಂತಹ  ಕಲಾ  ಸಾಮರ್ಥ್ಯದ  ಪ್ರದರ್ಶನದಿಂದಲೇ  ಡಾ|| ರಾಜ್ ಕುಮಾರ್  ರವರು  ಎಲ್ಲರ  ಮನಸ್ಸನ್ನು  ಗೆಲ್ಲುವ  ಮೂಲಕ  ಚಿರನೆನಪಾಗಿ  ಉಳಿಯಲು  ಸಾಧ್ಯವಾಗಿದೆ. ಅವರ  ಯಾವುದೇ  ಪಾತ್ರಗಳಲ್ಲಿ  ಸ್ವಯಂಕೃತ  ಆತ್ಮವಿಶ್ವಾಸದಿಂದಲೇ  ನೈಜತೆಯನ್ನು  ತುಂಬುವ  ಮೂಲಕ  ನಡೆ, ನುಡಿಗಳಿಂದ  ಮನಸ್ಸಿಗೆ  ಆಸಕ್ತಿ, ಉತ್ಸಾಹ  ತರುವಂತೆ, ಉತ್ತಮ  ಗುಣಮಟ್ಟದ  ಜೀವನದ  ಬಗ್ಗೆ  ಸೃಜನಶೀಲತೆಯು  ಬೆಳೆಯುವಂತೆ, ಕ್ಷಣಕ್ಷಣಕ್ಕೂ  ತಮಗೆ  ಸಾಂದರ್ಭಿಕ  ಸಮಸ್ಯೆಗಳನ್ನು  ತಂದ  ಎದುರಾಳಿಗಳಿಗೆ  ನೀತಿ ಸಂಹಿತೆಯ  ಮೌಲ್ಯಗಳನ್ನು  ತತ್ ಕ್ಷಣದಲ್ಲಿಯೇ  ಎದುರೇಟಾಗಿ  ನೀಡುತ್ತ  ಸದಾ  ಪ್ರೇಕ್ಷಕರನ್ನು  ತೃಪ್ತಿಶೀಲರನ್ನಾಗಿ  ಮಾರ್ಪಡಿಸುತ್ತ, ಅವರನ್ನು  ಸಜ್ಜನತೆಯ  ಮನೋ ಅಭಿವೃದ್ಧಿಯೊಂದಿಗೆ   ಮನಪರಿವರ್ಥಿಸುವ  ಮೂಲಕ  ಸಂಸ್ಕೃತಿಯನ್ನು  ಬೆಳೆಸುವಲ್ಲಿಯೂ  ಕಾರಣರಾಗಿ  ಕನ್ನಡದ  ಉತ್ತಮ  ಶ್ರೇಷ್ಠ  ಗೌರವಾನ್ವಿತ  ಕಲಾವಂತರಾಗಿದ್ದರಿಂದಲೇ  ಅವರ  ಕಲಾತ್ಮಕ  ಕ್ರಿಯೆ  ಹಚ್ಚಹಸುರಗಿಯೇ  ನೆನಪಲ್ಲಿ ಉಳಿಯುತ್ತಿದೆ. ಇಂತಹ  ಅವರ  ಕಲಾತ್ಮಕ  ಕ್ರಿಯೆಯಲ್ಲಿ  ಅವರ  ಪಾತ್ರದ  ಬಗ್ಗೆ  ತಮ್ಮ  ಚತುರತೆಯು  ಸ್ಪಷ್ಟ  ಪರಿಪೂರ್ಣತೆಯ  ಚಿಂತನೆಯಿಂದ   ಕೂಡಿರುತ್ತದೆ. ಅಂದರೆ  ತಮಗೆ  ದೊರಕಿದ  ಪಾತ್ರವು  ಯಾವುದು, ಎಂತಹದು  ಎನ್ನುವ  ಬಗ್ಗೆ  ವೈಜ್ಞಾನಿಕ  ಮನೋಭಾವನೆ. ಅ  ಪಾತ್ರವನ್ನು  ತಮ್ಮದೇ  ಅದ  ಶೈಲಿಯ  ಅಭಿನಯಕ್ಕೆ  ತಯಾರಿ  ಮಾಡಿಕೊಳ್ಳುವ  ಬಗ್ಗೆ  ಕಾಲ್ಪನಿಕವಾಗಿ  ಸಾಂದರ್ಭಿಕ  ಭಾವನೆಗಳ  ಆಕಾರ, ರೂಪಗಳ  ಸಿದ್ಧತೆಯ  ತಂತ್ರಜ್ಞಾನ, ಈ  ಎರಡು  ಕ್ರಮಬದ್ಧ  ಹಂತಗಳನ್ನು  ಪರಿಪಕ್ವಗೊಳಿಸುವುದರಿಂದ   ತಮ್ಮ  ಕೊನೆಯ  ಹಂತದಲ್ಲಿ  ಪ್ರಾಯೋಗಿಕವಾಗಿ  ಪಾತ್ರದ  ಪರಿವರ್ತಿತ  ಅಭಿನಯವನ್ನು  ಪ್ರದರ್ಶಿಸುವ  ಚತುರತೆ  ಅಂದರೆ  ಕಲೆ  (ಚಿಂತನೆ) ಗಾರಿಕೆ  ಅವರದಾಗಿತ್ತು. ಅಂದರೆ  ಇಲ್ಲಿ  ಅವರ  ಪಾತ್ರದ  ಬಗ್ಗೆ  ನೀಡಿರುವ  ವಿವರಣೆಯು  ಒಂದು  ಕಲಾಕೃತಿ  ಸಿದ್ಧತೆಗೆ  ಅವಶ್ಯ  ತಾತ್ವಿಕ  ಅಂಶ ಗಳು  ಯಾವುವು   ಮತ್ತು  ಅವುಗಳ  ಕಾರ್ಯವೈಖರಿಯ  ಬಗ್ಗೆ  ಅರ್ಥೈಸಿಕೊಳ್ಳಲು  ಇದು  ಆಸಕ್ತಿಯ  ಒಂದು  ಸುಲಭ  ವಿಧಾನದ  ಉದಾಹರಣೆಯಾಗಬಲ್ಲದು  ಎಂದುಕೊಂಡಿದ್ದೇನೆ., ಹಾಗೆಯೆ  ಅವರ  ಯಶಸ್ಸಿಗೆ, ಆ  ಸಂದರ್ಭಗಳಿಗೆ  ತಕ್ಕ  ಕನ್ನಡ  ಚಲನಚಿತ್ರದ ಇತರ  ಎಲ್ಲ  ಸಹಾಯಕ  ಮತ್ತು  ತಾಂತ್ರಿಕ  ಹಿನ್ನೆಲೆಯೂ   ಅಷ್ಟೇ  ಸಾಮರ್ಥ್ಯ ಉಳ್ಳವು     ಎಂಬುದು  ಸಹ  ಅಷ್ಟೇ  ಸತ್ಯ. ಇಂತಹ  ಕಲಾತ್ಮಕ  ಸಮೂಹ  ಕಲಾವಿದರಿಂದ  ರೂಪುಗೊಂಡ  ಕಲಾತ್ಮಕತೆ  ಹಾಗು  ಕನ್ನಡ  ಚಲನಚಿತ್ರದ  ಸದಾ  ಸೂರ್ಯ, ಚಂದ್ರರಂತೆ   ಕ್ಷಣಕ್ಷಣಕ್ಕೂ  ಬೆಳಕನ್ನು  ನೀಡುವ  ಮೂಲಕ  ಚಿರಸ್ಥಾಯಿಯಾಗಿ  ಉಳಿಯುವುವು.

    ಆದರೆ  ಅಶ್ಲೀಲತೆಯಿಂದ   ಕೂಡಿದ  ನಂತರದ  (ಅಶ್ಲೀಲತೆಯನ್ನು  ಆಕರ್ಶಿಸುವ    ಕೇವಲ  ಕೆಲವರನ್ನೇ  ದೃಷ್ಟಿಯಾಗಿಟ್ಟುಕೊಂಡು  ನಿರ್ಮಾಣಗೊಳ್ಳುತ್ತಿರುವ) ಈ   ಚಲನಚಿತ್ರಗಳು  ಮತ್ತು  ಕಿರುತೆರೆಯ  ಧಾರವಾಹಿಗಳಲ್ಲಿ  ದುಷ್ಟ  ಶಕ್ತಿಗಳೇ  ಚತುರತೆ ಉಳ್ಳವರು, ಸಜ್ಜನತೆ ಉಳ್ಳವರೆಲ್ಲರು  ಬುದ್ಧಿಹೀನರು, ಪ್ರೇಕ್ಷಕರಿಗೆ  ಪುಳಕಗೊಳಿಸುವ  ನೆಪದಲ್ಲಿ  ಒಳ್ಳೆಯ  ಗುಣಕ್ಕೆ  ಹಿಂಸೆ  ತೋರಿಸಲು  ದುಷ್ಟ  ಶಕ್ತಿಗಳನ್ನೇ  ಹೆಚ್ಚು  ತಂತ್ರಜ್ಞಾನಿಗಳನ್ನಾಗಿ  ಮಾಡುವ  ಮೂಲಕ  ಅವರದೇ  ಮೇಲುಗೈ  ಎಂಬಂತೆ  ಪಾತ್ರಗಳನ್ನು  ಸೃಷ್ಟಿಸುವ  ಮೂಲಕ, ಕಿರುತೆರೆಯ  ಧಾರವಾಹಿಗಳು  ಕೇವಲ  ಚಿತ್ರದ  ಅಂತ್ಯದಲ್ಲಿ  ಮಾತ್ರ  ಸಜ್ಜನತೆಗೆ  ಗೆಲುವನ್ನು  ತೋರಿಸುವ  ಹೊತ್ತಿಗೆ, ಚಿತ್ರದಲ್ಲಿ  ಸದಾ  ದುರ್ನಡತೆಗೆ  ಗೆಲುವನ್ನು  ಕಂಡು, ಆಸಕ್ತಗೊಂಡು, ಮಾನಸಿಕವಾಗಿ  ಅನುಕರಣೆಗೊಂಡು  ಧೀರ್ಘ  ಧಾರವಾಹಿಗಳು  ಮುಗಿಯುವ  ಹೊತ್ತಿಗೆ  ಅನೇಕ  ದುಷ್ಟ  ಶಕ್ತಿಗಳೇ  ಸೃಷ್ಟಿಯಾಗಲು  ಸುಲಭ   ಅವಕಾಶವಾಗುತ್ತಿದೆ. ಹಾಗೆಯೆ  ಭಾವನೆಗಳನ್ನು  ಪ್ರದರ್ಶಿಸುವಲ್ಲಿಯೂ  ಭಾವನೆಗಳ  ಸುತ್ತಾಟಕ್ಕೆ  ಸ್ಥಿತಿ  ಪ್ರಜ್ಞೆಯೇ  ಕಾರಣ, ಆದರೆ  ಈ   ಸ್ಥಿತಿ ಪ್ರಜ್ಞೆಯ  ಕೊರತೆಯನ್ನೂ  ಸಹ  ಸಜ್ಜನತೆಯ  ಪಾತ್ರಗಳಿಗೆ  ಮೀಸಲು  ಎಂಬಂತೆ   ಸೃಷ್ಟಿಸುತ್ತ  ಹೋಗುವುದು  ಕೇವಲ  ಧೀರ್ಘ  ಧಾರವಾಹಿ ಗಳಾಗಿ  ಮುಂದುವರೆಸುವ  ಪ್ರಯತ್ನಕ್ಕೆ  ಕಾರಣವಾಗಬಲ್ಲದೇ  ವಿನಃ  ಉತ್ತಮ  ಪರಿಣಾಮ  ಬೀರಲಾರದು. ದುಷ್ಕೃತ್ಯದ  ಮೂಲಕವೇ  ತಮ್ಮ  ಸಾಧನೆಗಳನ್ನು  ಸಾಧಿಸಲು  ಹೆಚ್ಚು  ಅವಕಾಶವಾಗುತ್ತದೆ  ಎಂದೆನಿಸಿ, ಇದು  ವ್ಯಕ್ತಿಗೆ  ಅನುಕೂಲ  ರೂಪದಲ್ಲಿ  ಅನುಕರಣೆಯೇ  ಆಗುತ್ತದೆಯೇ  ವಿನಃ, ಪರಿಣಾಮದ  ಬಗ್ಗೆ  ಕಲಾತ್ಮಕವಾಗಿ  ಚಿಂತನೆ  ಮಾಡುವ  ಬದಲಾಗಿ  ಶಿಕ್ಷಣದಲ್ಲಿ, ಪರಿಸರದಲ್ಲಿ  ಆಗುವ  ಅನುಕರಣೆಯ  ಅನುಭವವೇ  ಇಲ್ಲಿಯೂ  ಪರಿಣಮಿಸುವುದು. ಜಾಹಿರಾತುಗಳ  ಅಶ್ಲೀಲತೆಯ  ಪ್ರದರ್ಶನಕ್ಕೆ  ಮಿತಿಯಿಲ್ಲ  ಇಷ್ಟೇ  ಸಾಲದು  ಎಂಬಂತೆ  ಅನೈತಿಕ  ಸಂಬಂಧದಿಂದ  ಉಂಟಾಗುವ  ಎಡ್ಸ್  ರೋಗದ  ನೆಪದಲ್ಲಿ  ಲೈಂಗಿಕ  ಶಿಕ್ಷಣವು  ಸಹ  ಈಗ  ಪವಿತ್ರವಾದ   ಶಿಕ್ಷಣ ಕ್ಷೇತ್ರಕ್ಕೂ  ಕಾಲಿಡುತ್ತಿದೆ. ಒಂದು  ಸಮಸ್ಯೆಯ  ಪರಿಹಾರಕ್ಕೆ, ಈ  ಸಮಸ್ಯೆಯ  ಸೃಷ್ಟಿಯ  ಮೂಲವೇ  ಕಾರಣ  ಹೊರತು  ದುಷ್ಪರಿಣಾಮ  ಬೀರುವ  ಮತ್ತೊಂದು  ಸಮಸ್ಯೆಯನ್ನು  ತಂದು ಒಡ್ಡುವುದರಿಂದ  ಸಮಸ್ಯೆಯ  ಸರಪಳಿಯೇ  ಬೆಳೆಯುತ್ತದೆ  ವಿನಃ  ಸಮಸ್ಯೆ  ಪರಿಹಾರವಾಗದು. ವ್ಯಕ್ತಿಯ  ಮೇಲೆ  ಮಾನಸಿಕವಾಗಿ  ತೀವ್ರ  ದುಷ್ಪರಿಣಾಮ  ಬೀರುವುದು, ಅಂದರೆ  ಮನರಂಜನೆಯ  ನೆಪದ  ಮೂಲಕ  ಅತಿಯಾದ  ಅನಾವಶ್ಯಕ  ಅಶ್ಲೀಲ  ದೃಶ್ಯಗಳಿರುವ  ಮನರಂಜನಾ  ಕ್ಷೇತ್ರದಲ್ಲಿಯ  ಈ  ದೃಶ್ಯಗಳ  ಆಸಕ್ತಿಯುಳ್ಳವರು, ನರ ದೌರ್ಬಲ್ಯ  ಉಳ್ಳವರು, ಅನುಕರಣೀಯ  ಸ್ವಭಾವದವರು  ಇಂತಹವರಿಗೆ  ಇಂತಹ  ದೃಶ್ಯಗಳಿಂದ  ಪ್ರಚೋದನೆ  ನೀಡಿದಂತಾಗಿ  ಅನೈತಿಕ  ಸಂಬಂಧಕ್ಕೆ   ಕಾರಣ ವಾಗದಿರಲಾರವೇ? ಹೀಗೆ  ಇಂತಹ  ಸಮಸ್ಯೆಯ  ಸೃಷ್ಟಿಗೆ  ಇರುವ  ಮೂಲ  ಸ್ಥಳದಲ್ಲಿಯೇ  ನಿರ್ಬಂಧದ  ಕಟ್ಟುಪಾಡುಗಳಿದ್ದು  ತಾನೆ  ತಾನಾಗಿ  ನಿರ್ಮೂಲನೆಗೆ  ಅವಕಾಶವಿರುವಾಗ, ಪವಿತ್ರವಾದ  ಶಿಕ್ಷಣ  ಕ್ಷೇತ್ರವು  ತನ್ನ  ಪಾವಿತ್ರತೆಯನ್ನು  ಕಳೆದುಕೊಳ್ಳುವುದಲ್ಲದೆ, ಮನರಂಜನಾ  ಕ್ಷೇತ್ರಕ್ಕೆ  ಇನ್ನಷ್ಟು  ಮುಂದುವರಿಯಲು  ಅವಕಾಶ   ನೀಡಿದಂತಾಗುವುದಿಲ್ಲವೇ ?

    ಅಂದು  ಅನಾಗರಿಕ  ಎಂದೆನಿಸಿಕೊಂಡ  ಆದಿಮಾನವನು  ಮನಕ್ಕಾಗಿ  ಹಂತಹಂತವಾಗಿ  ಪ್ರಕೃತಿ  ವಸ್ತು, ಬಟ್ಟೆ  ನಂತರ  ಉಡುಪುಗಳನ್ನು  ಕಂಡುಕೊಂಡು  ಧರಿಸಿಕೊಳ್ಳುವ  ಮೂಲಕ  ಉತ್ತಮ  ನಾಗರೀಕನೆನಿಸಿಕೊಳ್ಳುತ್ತಿದ್ದಂತೆಯೇ, ಈಗ  ಮತ್ತೆ  ನವೀನತೆಯ  ನೆಪದಲ್ಲಿ  ಹಿಂದಿನ  ಸ್ಥಿತಿಗೆ  ಹಿಂತಿರುಗುತ್ತಿರುವುದು, ಇದರಲ್ಲಿ  ಮಾನಸಿಕವಾಗಿಯೂ, ನೈತಿಕವಾಗಿಯೂ  ನಾಗರೀಕತೆಯ  ಮೌಲ್ಯತೆಯು ಯಾರಿಗೆ  ಸಲ್ಲಬಹುದು? ಇಂತಹ  ಸಾಂದರ್ಭಿಕ  ಸ್ಥಿತಿಗಳು  ಅನುಕರಣೆಯಾಗುತ್ತ  ಹೋಗುವುದು  ನಾಗರೀಕತೆಯ  ಬೆಳವಣಿಗೆಯೇ? ಕಲೆ, ಎಂದಿಗೂ  ಶೀಲವಂತಿಗೆಯಿಂದ  ಸೃಷ್ಟಿಯಾದರೆ  ಮಾತ್ರ  ಪ್ರತಿ  ವ್ಯಕ್ತಿಯ  ಭಾವನೆಗಳಿಗೆ  ಸ್ಪಂಧಿಸುತ್ತದೆ ಇಲ್ಲವಾದಲ್ಲಿ  ನಕ್ಷತ್ರದಂತೆ  ಮಿಂಚಿ  ಮಾಯವಾಗಬಲ್ಲದು, ಅಥವಾ  ಆಸಕ್ತಿಯ  ಭಾವನೆಗಳಿಗೆ  ಸ್ಪಂಧಿಸಿ  ಅನುಕರಣೆಯಾಗಬಲ್ಲದು. ಸಂಸ್ಕೃತಿಯ  ಉತ್ತಮ  ಬೆಳವಣಿಗೆ  ಮನಪರಿವರ್ತಿಸುವ  ಸಾಮರ್ಥ್ಯವನ್ನು  ಬೆಳೆಸಿಕೊಳ್ಳಲು  ಅನುಕೂಲವಿರುವ  ಚಲನಚಿತ್ರ  ಹಾಗು  ಕಿರುತೆರೆಗಳಿಗೂ  ಮತ್ತು  ಮಾನವ  ನಿರ್ಮಿತ  ವಸ್ತುಗಳ  ವಿನ್ಯಾಸದಲ್ಲಿ  ಪರಿವರ್ತನೆಯ  ಸಾಮರ್ಥ್ಯವು  ಮಂದಗತಿಯಲ್ಲಿ  ಸಾಗುತ್ತಿರುವ  ಬದುಕಿನ  ಕಲೆಗೂ  ಬಹುಶಃ  ಉತ್ತಮ  ಗುಣಮಟ್ಟದ  ಚಿಂತನಾ  ಸಾಮರ್ಥ್ಯದ  ಕೊರತೆಯೇ  ಕಾರಣವಾಗಿರಬಹುದು. ಆದರೆ  ಇಲ್ಲಿ  ಸಂಸ್ಕೃತಿ  ಮತ್ತು  ವೃತ್ತಿ  ಇವು  ವಂಚಿತಗೊಂಡಿದ್ದರು, ಚಿಕ್ಕಮಕ್ಕಳಿಗೆ  ಸಂಗೀತ, ಸಾಹಿತ್ಯ, ನೃತ್ಯ  ವಿವಿಧ  ರೀತಿಯ  ಗಾಯನಗಳಿಗೆ  ದೂರದರ್ಶನಲ್ಲಿ  ಈಚೆಗೆ  ಹೆಚ್ಚು  ಅವಕಾಶ  ನೀಡುವ  ಮೂಲಕ  ಪ್ರವೃತ್ತಿಯ  ಉತ್ತಮ  ಬೆಳವಣಿಗೆಗೆ  ಮಾತ್ರ  ಕಾರಣವಾಗುತ್ತಿರುವುದು  ವೀಕ್ಷಕರಿಗೆ  ಸ್ವಲ್ಪಮಟ್ಟಿಗೆ  ನೆಮ್ಮದಿಯ  ನಿಟ್ಟುಸಿರು  ಬಿಡಲು  ಅವಕಾಶವಾದಂತಾಗಿದೆ  ಎನ್ನುವಷ್ಟರಲ್ಲೇ  ಈ   ಪ್ರವೃತ್ತಿಯಲ್ಲಿಯೂ  ಅಶ್ಲೀಲತೆಯು  ಮೆರೆಯುತ್ತಿರುವುದು          ಖೆದವೆನಿಸುತ್ತಿದೆ. ಇಚೆಗೆ  ಪ್ರಸಾರವಾದ, ಪ್ರಸಾರವಾಗುತ್ತಿರುವ  ಕೇವಲ  ಕನಿಷ್ಠ  ಸಂಖ್ಯೆಯ  ಬೆರಳೆಣಿಕೆಯಷ್ಟು  ಉತ್ತಮ  ಗುಣಮಟ್ಟದ  ಧಾರವಾಹಿಗಳು  ಬಂದರೆ  ಸಾಲದು, ಉತ್ತಮ  ಗುಣಮಟ್ಟದ  ಮೂಲಕ  ಎಲ್ಲ  ಧಾರವಾಹಿಗಳು  ನಿರ್ಮಾಣಗೊಂಡು  ಸ್ಪರ್ಧಾತ್ಮಕ  ವ್ಯವಸ್ಥೆಯಲ್ಲಿ  ಪ್ರಸಾರವಾದರೆ  ಮಾತ್ರ  ಮನಪರಿವರ್ತನೆಯ  ಮೂಲಕ  ಸಂಸ್ಕೃತಿಯ  ಉತ್ತಮ  ಬೆಳವಣಿಗೆಯಾಗಲು ಸಾಧ್ಯವಾಗಬಲ್ಲದು.

        ಒಮ್ಮೆ  ಹಿಂದಿನ  ನೆನಪಿನತ್ತ  ಗಮನಿಸಿ, ಅಂದರೆ -

    ಆಗ - ಡಾ|| ರಾಜ್  ಕುಮಾರ್  ರವರು  ಅಭಿನಯಿಸಿದ  ಎಲ್ಲ  ಕನ್ನಡ ಚಲನಚಿತ್ರಗಳು  ಸದಭಿರುಚಿ  ಮತ್ತು  ಸದ್ಭಾವನೆಗಳಿಗೆ ಸ್ಪಂದಿಸುವಂತವುಗಳಾಗಿದ್ದವು.

    ಈಗ - ನಂತರದ  ಅವಧಿಯಲ್ಲಿ  ನಿರ್ಮಾಣಗೊಳ್ಳುತ್ತಿರುವ  ಚಲನಚಿತ್ರಗಳು  ಪಾವಿತ್ರತೆಗೆ  ಎಲ್ಲಿಯೂ  ಕಿಂಚಿತ್ತು  ಅಂತರವು  ಇಲ್ಲದೆ  ಅವಕಾಶವೇ ಇರದ ಚಿತ್ರಗಳು.

    ಆಗ - ಶೀಲವಂತಿಕೆಗೆ  ಗೌರವ  ಕೊಡುತ್ತಾ, ನಿಷ್ಠೆಯೇ  ಆವೃತ್ತಗೊಂಡ  ಹಾಗು  ಶಿಷ್ಟ  ಸಾಹಸಿಗಳದೇ   ಪ್ರಧಾನವಾದ  ಚಿತ್ರಗಳು ಆಗಿರುತ್ತಿದ್ದವು

    ಈಗ - ಕೇವಲ  ಅಶ್ಲೀಲತೆಯೇ  ಕೇಂದ್ರಬಿಂದು  ಮತ್ತು
ಆವೃತ್ತಗೊಂಡ  ಹಾಗು  ದುಷ್ಟ  ಸಾಹಸಿಗಳದೇ   ಪ್ರಧಾನವಗಿರುವಂತಹುಗಳಗಿವೆ.

    ಆಗ - ಆಗಿನ  ಕನ್ನಡ  ಚಲನಚಿತ್ರಗಳು  ಪ್ರೇಕ್ಷಕರ  ಮೇಲೆ  ಒಳ್ಳೆಯ  ಪರಿಣಾಮ  ಬೀರುತ್ತಿದ್ದವು  ಹಾಗು  ಉತ್ತಮ  ಮನಪರಿವರ್ತನೆಗೊಳಿಸುತ್ತಿದ್ದವು

    ಈಗ - ಈಗಿನ  ಚಲನಚಿತ್ರಗಳು  ಪ್ರೇಕ್ಷಕರ  ಮೇಲೆ
ದುಷ್ಪರಿಣಾಮ ಬಿರಿ  ಅನುಕರಣೆಯಿಂದ  ಮಾನಿತ  ಮನಸ್ಸನ್ನು  ಕ್ಷೀಣಗೊಳಿಸುತ್ತಿವೆ   


ಅದಕ್ಕೆಂದೇ  ಅಲ್ಲವೇ  ಅಂದು  ಡಾ|| ರಾಜ್ ಕುಮಾರ್  ಅಭಿನಯದ  ಚಲನಚಿತ್ರಗಳ  ಅವಧಿಯಲ್ಲಿ  ಏರುತ್ತಿದ್ದ  ಚಲನಚಿತ್ರ ಮಂದಿರಗಳ  ಸಂಖ್ಯೆ  ಈಗ  ನಷ್ಟದಿಂದ  ಅಲ್ಲದೆ  ಪಾಪದ  ಪ್ರಾಯಶ್ಚಿತ್ತಕ್ಕಾಗಿಯೋ  ಎಂಬಂತೆ  ಈಗಿನ  ಜನಸಂಖ್ಯಾ  ಸ್ಪೋಟದಲ್ಲಿಯೂ  ಕಲ್ಯಾಣ  ಮಂಟಪಗಳಾಗುತ್ತಿವೆ. ಇದಕ್ಕಿಂತಲೂ  ಬೇಕೇ  ಸಾಕ್ಷಿ. ಈ  ಪರಿಹಾರಕ್ಕೊಂದೇ ದಾರಿ, ಎಲ್ಲ  ಚಿತ್ರಮಂದಿರದ  ಮಾಲೀಕರ  ಆತ್ಮಸಾಕ್ಷಿಯೊಂದಿಗೆ  ಚಿತ್ರಮಂದಿರಗಳು  ಕಲ್ಯಾಣ  ಮಂಟಪಗಳಾಗುವುದು , ಇಲ್ಲವೇ  ಉತ್ತಮ  ಚಲನಚಿತ್ರಗಳ  ಬಿಡುಗಡೆಗೆ  ಮುಷ್ಕರನಿರತರಗುವುದು.

    ಡಾ || ರಾಜ್ ಕುಮಾರ್  ರವರ  ಬಗ್ಗೆ  ಅಭಿಮಾನದ  ಮಾತಿದೆ, ಮನರಂಜನೆಯ  ಮೂಲಕ  ಸಮಾಜಕ್ಕೆ  ಮತ್ತು  ಮನುಕುಲಕ್ಕೆ  ಸಂಬಂಧಿಸಿದ  ಬದುಕಿನ  ಎಲ್ಲ  ಕ್ಷೇತ್ರಗಳಿಗೂ  ಏನೇನು  ಕೊಟ್ಟಿದ್ದಾರೆ? ಅನ್ನುವುದಕ್ಕಿಂತ  ಏನು  ಕೊಟ್ಟಿಲ್ಲ? ಎನ್ನುವಂತ  ಮಾತಿದೆ  ಆದರೆ, ಅವರು ಜೀವಂತವಿದ್ದಾಗಲೇ ಇಡೀ ವಿಶ್ವಕ್ಕೆ  ಕೊಡಬೇಕಾದ  ಒಂದು  ಮಹತ್ವದ  ಉಡುಗೊರೆ  ಉಳಿದಿದೆ  ಎಂದು  ಹೇಳಿದರೆ  ತಪ್ಪಾಗಲಾರದು. ಪ್ರವೃತ್ತಿ, ವೃತ್ತಿ  ಮತ್ತು  ಸಂಸ್ಕೃತಿಯ  ಬಗ್ಗೆ  ಮನರಂಜನೆಯ  ಮೂಲಕ  ಕಲೆ  (ಜ್ಞಾನ) ಯನ್ನು  ನೀಡಿದ್ದಾರೆ, ಆದರೆ, ಇವುಗಳು  ಅವರ  ಚಿರನೆನಪು  ಸದಾ  ಕಲ  ಉಳಿಯುವಂತೆ  ಅವರ  ಹೆಸರಿನಲ್ಲಿಯೇ  ಒಂದು  ಶಿಕ್ಷಣ  ಸಂಸ್ಥೆಯನ್ನು  ಪ್ರಾರಂಬಿಸುವ  ಮೂಲಕ, ಪ್ರತ್ಯಕ್ಷ  ಸಾಕ್ಷಿಯಾಗಿ  ಅನುಭವ  ಹಾಗು  ಕಲೆ  ಈ   ಎರಡು  ಪರಸ್ಪರ  ಪ್ರತಿಬಿಂಬಿಸುತ್ತ  ಲಲಿತಕಲೆ  ಹಾಗು  ಬದುಕಿನ  ಕಲೆಗೆ  ಸಂಬಂಧಿಸಿದ, ಹಂತಹಂತವಾಗಿ  ಎಲ್ಲ  ಕ್ಷೇತ್ರಗಳಿಗೂ  ಅರ್ಹತೆಯುಳ್ಳವರಾಗಿ  ಮತ್ತು  ಉತ್ತಮ  ತರಬೇತಿಯೊಂದಿಗೆ  ಸಿದ್ಧ  ಹಸ್ತಕರಾಗಿ  ಒಂದೇ  ಸಂಸ್ಥೆಯ  ಮೂಲಕ  ಹೊರಬರುವಂತಹ  ಒಂದು  ಹೊಸ  ರೂಪದ  `ಕಲಾಶಿಕ್ಷಣ' ಕ್ಷೇತ್ರವಾಗಿ, ಇಡೀ   ವಿಶ್ವದ  ಶಿಕ್ಷಣ  ಕ್ಷೇತ್ರಕ್ಕೆ  ಅಪರೂಪದ  ಉಡುಗೊರೆಯೂ  ಆಗಬಲ್ಲ, ಹಾಗೆಯೆ  ಡಾ|| ರಾಜ್ ಕುಮಾರ್  ಅವರ  ಆತ್ಮಕ್ಕೂ  ಶಾಂತಿಯನ್ನು  ಉಂಟುಮಾಡಬಲ್ಲ   ಮತ್ತು  ಶಾಂತಿ, ಶಿಸ್ತು, ವಿಧೇಯತೆಯಿಂದ  ಭ್ರಷ್ಟಾಚಾರವನ್ನು  ಪ್ರತಿಭಟಿಸುವ  ಚಿಂತನ  ಸಾಮರ್ಥ್ಯವು  ಪ್ರತಿಯೊಬ್ಬ  ಪ್ರಜೆಗೂ  ಲಭ್ಯವಾಗುವಂತಹ  ಮತ್ತು  ಉತ್ತಮ  ಆಡಳಿತಕ್ಕೆ  ಸ್ವಚ್ಚ, ಶುದ್ಧ  ಇಂದ್ರಿಯಗಳಂತೆ  ಕಾರ್ಯ  ನಿರ್ವಹಿಸುವ  ಕಲಾವಿದರನ್ನು  ಸೃಷ್ಟಿಸುವಂತ  `ಕಲಾಶಿಕ್ಷಣ'ದ  ಅವಶ್ಯಕತೆಯಿದೆ.