ಅನುಭವ: ಬಾಹ್ಯ ರೂಪದಿಂದ ಪಡೆಯುವ ಜ್ಞಾನ
ಕಲೆ : ಅಂತರಂಗದಿಂದ ವ್ಯಕ್ತಪಡಿಸುವ ಜ್ಞಾನ
ಅನುಭವವನ್ನು ಅನುಕರಿಸಬಹುದು, ಆದರೆ
ಕಲಾ ಸಾಮರ್ಥ್ಯವನ್ನು ಅನುಕರಿಸಲು ಸಾಧ್ಯವಿಲ್ಲ
ಅನುಭವ ಕೇವಲ ಅನುಕರಣೆಯಾಗಿ ಉಳಿಯಬಲ್ಲದು, ಆದರೆ
ಕಲೆ ವ್ಯಕ್ತಿಯ ವ್ಯಕ್ತಿತ್ವವನ್ನೇ ಪರಿವರ್ತನೆ ಮಾಡಬಲ್ಲದು
ಪ್ರವೃತ್ತಿ, ವೃತ್ತಿ, ಸಂಸ್ಕೃತಿ ಇವು ಒಂದಕ್ಕೊಂದು ಸಮನ್ವಯ ರೂಪದಲ್ಲಿ ಸಂಯೋಜನೆಗೊಂಡು ಬದುಕು ಹಾಗು ಜೀವನದೊಂದಿಗೆ ಚಲಿಸುವ ಕ್ರಿಯಾ ವಿಧಾನಗಳಾಗಿವೆ, ಆದ್ದರಿಂದ ಶಿಕ್ಷಣದಲ್ಲಿ ಕೇವಲ ಅನುಕರಣೀಯ ಅನುಭವ ಮತ್ತು ಭಾಷೆ, ಸಾಹಿತ್ಯದ ಮೂಲಕವೇ ಮಾಹಿತಿಗಳ ಗ್ರಹಿಕೆ ಇವು ಹೆಚ್ಚು ಪ್ರಮಾಣದಲ್ಲಿರುವ ಅಭ್ಯಾಸಕಿಂತಲೂ ಚಿಂತನಾ ಸಾಮರ್ಥ್ಯದ ಬೆಳವಣಿಗೆಗೆ ಅವಕಾಶವಾಗುವಂತಹ ಮತ್ತು ಪರಿವರ್ತನಾ ಸಾಮರ್ಥ್ಯವು ಬೆಳೆಯುವಂತ ಪ್ರಾರಂಭಿಕ ಅಭ್ಯಾಸವು ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿಯೇ ಅಳವಡಿಸಿಕೊಂಡಲ್ಲಿ ವಿದ್ಯಾರ್ಥಿಗಳು ಹಂತ ಹಂತವಾಗಿ ಪ್ರತಿ ವಿಷಯದಲ್ಲೂ ಚಿಂತನಾ ಸಾಮರ್ಥ್ಯದೊಂದಿಗೆ ಕುಶಲತೆ ಬೆಳೆದು ಉತ್ತಮ ಕಲಾವಂತರಾಗಲು ಸಾಧ್ಯವಾಗಬಲ್ಲದು. ಇಂತಹ ಚಿಂತನಾ ಹಾಗು ಪರಿವರ್ತನಾ ಸಾಮರ್ಥ್ಯವು ಶೀಘ್ರ ಕಡಿಮೆ ವೆಚ್ಚ, ಹೆಚ್ಚು ಶ್ರಮವಿಲ್ಲದೆ ಹಾಗು ಸುಲಭ ವಿಧಾನದಲ್ಲಿ ಬೆಳವಣಿಗೆಯಾಗಲು ಉತ್ತಮ ಅವಕಾಶವಿರುವುದು ಚಿತ್ರಕಲಾ ಅಭ್ಯಾಸದಲ್ಲಿ ಮಾತ್ರ, ಕೇವಲ ಆಕಾರಗಳ ಕಲ್ಪನೆಯ ಮೂಲಕವೇ ವಿಶ್ವದಲ್ಲಿ ಮಾನವ ನಿರ್ಮಿತ ಯಾವುದೇ ವಸ್ತುಗಳ ವಿನ್ಯಾಸದಲ್ಲಿ ಪರಿವರ್ತನೆಯ ಸಾಮರ್ಥ್ಯ ಹಾಗು ಹೊಸ ರೂಪದ ವಸ್ತುವಿನ ಕಲ್ಪನೆಯ ಸೃಷ್ಠಿಗೆ ಪ್ರೇರಣೆ ಮೂಲಕ ಕ್ರಮಬದ್ಧವಾಗಿ ಚಿಂತನಾ ಕ್ರಿಯೆ ನಡೆಯಲು ಚಿತ್ರಕಲಾ ಪ್ರಾರಂಭಿಕ ಅಭ್ಯಾಸ ಮಾತ್ರ ನೆರವು ನೀಡಬಲ್ಲದು. ಕೇವಲ ಸಂಬಂಧಿಸಿದ ವೃತ್ತಿ ಶಿಕ್ಷಣ ಮತ್ತು ತರಬೇತಿ ಹಂತಕ್ಕೆ ಹೋದಾಗ ಮಾತ್ರ ಅವಶ್ಯ ವಸ್ತುಗಳ ಆಕಾರ ಕಲ್ಪನೆಗಳ ಬಗ್ಗೆ ಪರಿತಪಿಸುವುದಕ್ಕಿಂತಲೂ ಭಾಷಾ ಅಭ್ಯಾಸದಂತೆಯೇ ಚಿತ್ರಕಲಾ ಪ್ರಾರಂಭಿಕ ಅಭ್ಯಾಸವು ಸಹ ಮಕ್ಕಳಿಗೆ ಪ್ರಾರಂಭಿಕ ಹಂತದಿಂದಲೇ ಶಿಕ್ಷಣದಲ್ಲಿ ಅಳವಡಿಸಿದಲ್ಲಿ ವಸ್ತುಗಳ ಆಕಾರ ಕಲ್ಪನೆಗಳ ಜೊತೆಗೆ ಚಿಂತನಾ ಸಾಮರ್ಥ್ಯವು ಬೆಳವಣಿಗೆಯಾಗಬಲ್ಲದು. ಭಾಷೆ, ಸಾಹಿತ್ಯವು ವಿಷಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಆದರೆ ಚಿತ್ರಕಲೆ ಅಭ್ಯಾಸದಿಂದ ಪ್ರತ್ಯಕ್ಷ ಹಾಗು ಪ್ರಾಯೋಗಿಕವಾಗಿ ವೈಜ್ಞಾನಿಕ ಮನೋಭಾವನೆ, ತಂತ್ರಜ್ಞಾನ ಮತ್ತು ಚಿಂತನಾ ಸಾಮರ್ಥ್ಯ ಬಹು ಬೇಗನೆ ರೂಢಿಸಿಕೊಳ್ಳ ಬಹುದಾಗಿದೆ.
ಚಿತ್ರ ಕುಶಲತೆಗೆ ಗಣಕ ಯಂತ್ರದಲ್ಲೂ ಆಕಾರಗಳ ಪರಿಕಲ್ಪನೆಗೆ ಸಿದ್ಧ ಮೂಲಾಂಶಗಳ ಅನುಕೂಲವಿದ್ದರೂ , ಹಸ್ತ ಕುಶಲತೆಯ ಸಾಮರ್ಥ್ಯದಿಂದ ಸಿಗುವ ಮೆಚ್ಚುಗೆ , ತೃಪ್ತಿ ಗಣಕಯಂತ್ರದ ಚಾಲನೆಯಲ್ಲಿ ಸಿಗಲಾರದು . ಗಣಕ ಯಂತ್ರ ನಿರಂತರ ಅಭ್ಯಾಸಕ್ಕಾಗಲಿ ಮತ್ತು ಸಾಂದರ್ಭಿಕ ಚಿಂತನೆಯಿಂದ ಆಸಕ್ತಗೊಂಡಾಗ ತನ್ನ ಕಾಲ್ಪನಿಕ ಪ್ರತಿಭೆಯನ್ನು ಹೊರಹೊಮ್ಮಿಸಲು ಎಲ್ಲ ಮಕ್ಕಳಿಗೂ ಕಡಿಮೆ ವೆಚ್ಚ ಹಾಗು ಸುಲಭದಲ್ಲಿ ಸಿಗಲಾರದ ವಸ್ತು. ಹಸ್ತ ಕುಶಲತೆಯ ಮತ್ತು ಗಣಕಯಂತ್ರದ ಚಾಲನೆಯ ಕುಶಲತೆಯ ಬೆಳವಣಿಗೆಯ ಕಲಾ ಪರಿವರ್ತನೆಯಲ್ಲಿ ಅಂದರೆ ವೈಜ್ಞಾನಿಕ ಮನೋಬಾವನೆ, ತಂತ್ರಜ್ಞಾನ ಮತ್ತು ಚಿಂತನೆ ಇವುಗಳ ಕಾರ್ಯ ವೈಖರಿಗಳಲ್ಲಿ ಭಿನ್ನತೆ ಇರುತ್ತದೆ. ಕೈ ಬರವಣಿಗೆಯ ಅಕ್ಷರ ಅಭ್ಯಾಸವನ್ನು ಕಲಿಯಲು ಗಣಕ ಯಂತ್ರದಲ್ಲಿಯು ಸುಲಭ ಅವಕಾಶವಿದ್ದರೂ ಕೈ ಬರವಣಿಗೆಯ ಅಕ್ಷರ ಹಸ್ತ ಅಭ್ಯಾಸವನ್ನು ಕಡೆಗಣಿಸಲು ಸಾಧ್ಯವಾದೀತೆ.
ಭಾಷಾ ಬರವಣಿಗೆಯ ಸಾಮರ್ಥ್ಯಕ್ಕೆ ಸುಲಭ ವಿಧಾನದ ಪ್ರಾರಂಭಿಕ ಅಭ್ಯಾಸದ ವ್ಯವಸ್ಥೆಯಿದೆ, ಅಕ್ಷರ, ಪದ, ವಾಕ್ಯ, ವಾಕ್ಯವೃಂದ ನಂತರ ಭಾಷೆ ಹೀಗೆ ಎಲ್ಲ ಮಕ್ಕಳಿಗೂ ಸುಲಭ ವಿಧಾನದಲ್ಲಿ ಕಲಿಯಲು ಅವಕಾಶವಿದೆ, ಹಾಗೆಯೇ ಚಿತ್ರ ರಚನಾ ಸಾಮರ್ಥ್ಯಕ್ಕೂ ಸಹ ಎಲ್ಲ ಮಕ್ಕಳು ಆಸಕ್ತಿಯೊಂದಿಗೆ ಕಲಿಯಲು ಇಂತಹ ಒಂದು ಸುಲಭ ವಿಧಾನದ ಭಾಷೆಯ ಪ್ರಾರಂಭಿಕ ಅಭ್ಯಾಸವನ್ನೇ ಆಧಾರವಾಗಿಟ್ಟುಕೊಂಡು ಅಂದರೆ ಅಕ್ಷರಗಳು, ಪದ ರಚನೆ, ವಾಕ್ಯ ರಚನೆ, ವಾಕ್ಯ ವೃಂದ ನಂತರ ಭಾಷಾ ಬರವಣಿಗೆ ಹೀಗೆ ಹಂತ ಹಂತವಾಗಿ ಕಲಿಯುವ ಪ್ರಾರಂಭಿಕ ಅಭ್ಯಾಸದಂತೆಯೇ ಕ್ರಮವಾಗಿ ರೇಖೆಗಳು, ಆಕಾರ ರಚನೆ, ಆಕೃತಿ ರಚನೆ, ಘನಾಕೃತಿ ರಚನೆ ನಂತರ (ಬಯಸಿದ) ಪೂರ್ಣ ವಸ್ತುಚಿತ್ರ ರಚನೆ ಹೀಗೆ ಹಂತ ಹಂತವಾಗಿ ಅಭ್ಯಾಸ ಮಾಡಲು ಚಿತ್ತಾರ ರಚನೆಯ ಒಂದು ಪರಿಕಲ್ಪಿತ ವ್ಯವಸ್ಥೆಯನ್ನು ಕಂಡುಕೊಂಡು, ಈ ವ್ಯವಸ್ಥೆಯನ್ನು ಕಲೆ, ಕಲಾ ಭಾಗಗಳು, ಚಿತ್ರಕಲೆಯ ಉಪಯೋಗ, ಚಿತ್ರಗಳಿಂದ ಶೀಘ್ರ ಮಾಹಿತಿ ಅಲ್ಲದೆ ಅನುಕರಣೆ, ವೀಕ್ಷಣೆ ಮತ್ತು ಚಿಂತನಾ
ಚಿತ್ರ ರಚನಾ ವಿಧಾನದ ಪ್ರಾರಂಭಿಕ ಅಭ್ಯಾಸದ ಹಂತಗಳ ಬಗ್ಗೆ ಈಗಾಗಲೇ ದಿನಾಂಕ: ೧೨.೧೧.೧೯೯೮ ರಂದು ಹರಿಹರ, ೨೩.೧೧.೯೮ ರಂದು ಚಿತ್ರದುರ್ಗ, ೦೩.೧೨.೯೮ ರಂದು ಹೊಳಲ್ಕೆರೆ, ೦೪.೧೨.೯೮ ರಂದು ಹೊಸದುರ್ಗ, ೧೬.೧೨.೯೮ ರಂದು ಹಿರಿಯೂರು ನಂತರ ೨೪.೦೯.೯೯ ರಂದು ಜಗಳೂರು ಈ ಸ್ಥಳಗಳಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷರಿಗೆ ಬುನಾದಿ ತರಬೇತಿ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಲಾ ಶಿಕ್ಷಣದ ಬಗ್ಗೆ ಮಾರ್ಗದರ್ಶನ ಹಾಗು ನಿಯೋಜನೆಯ ಮೂಲಕ ದಾವಣಗೆರೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಡಿ.ಇಡಿ. (ಟಿ.ಸಿ.ಎಚ್.) ಶಿಕ್ಷಣಾರ್ಥಿಗಳಿಗೂ ದಿನಾಂಕ: ೨೦.೦೮.೧೯೯೮ ರಿಂದ ೩೦.೦೯.೨೦೦೬ ರ (ಸೇವೆಯಿಂದ ನಿವೃತ್ತಿಯಾಗುವ) ವರೆಗೂ ಮೇಲ್ಕಂಡ ಕಲೆ, ಕಲಾ ಬಾಗಗಳು, ಚಿತ್ರಕಲೆಯ ಉಪಯೋಗ, ಚಿತ್ರಗಳಿಂದ ಶೀಘ್ರ ಮಾಹಿತಿ, ಚಿತ್ರಕಲಾ ಪ್ರಾರಂಭಿಕ ಅಭ್ಯಾಸ ಅಂದರೆ ಅನುಕರಣೆ, ವೀಕ್ಷಣೆ ಮತ್ತು ಚಿಂತನೆ ಚಿತ್ರ ರಚನಾ ವಿಧಾನದ ಬಗ್ಗೆ ಮಾಹಿತಿ ಅಲ್ಲದೆ ಸುಲಭಚಿತ್ರ ರಚನೆಯ ಅಭ್ಯಾಸದ ಬಗ್ಗೆಯೂ ಮಾರ್ಗದರ್ಶನ ನೀಡಿದ್ದೇನೆ. ಅಂದು ೧೯೯೮ ರ ವರೆಗೂ (ಚಿತ್ರಕಲಾ ಪುಸ್ತಕಗಳ ಹೊರತು) ಕೇವಲ ನಾಲ್ಕು, ಐದು ಚಿತ್ರಗಳು ಇರುತ್ತಿದ್ದ ಯಾವುದೇ ಪಾಠದ ಪುಸ್ತಕಗಳು, ನಂತರ ೨೦೦೦ ನೇ ವರ್ಷದಿಂದ ಈಚೆಗೆ ರೂಪಿಸಲಾಗುತ್ತಿರುವ ಎಲ್ಲ ಪಾಠದ ಪುಸ್ತಕಗಳಲ್ಲಿ ಚಿತ್ರಗಳೇ ಹೆಚ್ಚು ಪ್ರಮಾಣದೊಂದಿಗೆ ವಿಜ್ರಮಿಸುತ್ತಿದ್ದು, (ಬುನಾದಿ ತರಬೇತಿ ಸಂದರ್ಭದಲ್ಲಿ ಕಲಾ ಶಿಕ್ಷಣದ ಮಾರ್ಗದರ್ಶನ ಪಡೆದ ಮೇಲ್ಕಂಡ ಶಿಕ್ಷರಿಗೆ ಮತ್ತು ಶಿಕ್ಷಣಾರ್ಥಿಗಳಿಗೆ ಮಾರ್ಗದರ್ಶನದ ಪರಿಣಾಮದ ಬಗ್ಗೆ ಮನಗಂಡಿರಬಹುದು ಎಂದುಕೊಂಡಿದ್ದೇನೆ) ಇದು ಉತ್ತಮ ಜ್ಞಾನಾಭಿವೃದ್ಧಿಯ ಬೆಳವಣಿಗೆಗೆ ಮಾತ್ರ ದಾರಿದೀಪವಾಗಲು ಕಾರಣವಾಗಿದೆ, ಆದರೆ ಇಷ್ಟು ಮಾತ್ರಕ್ಕೆ ಪ್ರತಿಯೊಬ್ಬ ವ್ಯಕ್ತಿಗೂ ಬದುಕಿನ ಕುಶಲತೆ, ಬದುಕಿನ ಕಲೆಗೆ ತಕ್ಕ ಅವಕಾಶವಾಗಿದೆ ಎಂದು ತಿಳಿಯುವುದು ತಪ್ಪಾಗಬಹುದು. ಸಾಹಿತ್ಯ ಸಾಂದರ್ಭಿಕ ಚಿತ್ರಗಳನ್ನಷ್ಟೇ ಹೊತ್ತು ಶಿಕ್ಷಣದಲ್ಲಿ ಸಾಗಿದರೆ ಮಾಹಿತಿಗಳು ಮಾತ್ರ ಶೀಘ್ರ ಲಭ್ಯವಾಗಬಲ್ಲವು. ಆದರೆ ಇದು ಕೇವಲ ಪ್ರಯಾಣಿಕರನ್ನು ಹೊತ್ತು ಸಾಗುವ ಜಟಕಾ ಬಂಡಿಯ ಮೋಜಿನ ಕುದುರೆಯಂತಾಗಬಾರದು, ಅಥವಾ ಸಾಮಗ್ರಿಗಳನ್ನು ಹೊತ್ತು ಸಾಗುವ ಒಂಟಿ ಎತ್ತಿನ ಗಾಡಿಯಂತಾಗಬಾರದು, ಸಾಹಿತ್ಯ ತನಗಿಂತಲೂ ಶಿಘ್ರ ಮಾಹಿತಿಯನ್ನು ನೀಡಬಲ್ಲ ಮತ್ತು ಬದುಕಿನ ಕುಶಲತೆಗೆ ಸಾಂದರ್ಭಿಕ ಅವಶ್ಯ ವಸ್ತುಗಳ ವಿನ್ಯಾಸವನ್ನು ಪರಿವರ್ತಿಸುವ ಚಿಂತನ ಸಾಮರ್ಥ್ಯವನ್ನು ಪಡೆಯಲು ಅವಕಾಶವಿರುವ ವ್ಯವಸ್ಥಿತ ಚಿತ್ರಕಲಾ ಅಭ್ಯಾಸದೊಂದಿಗೆ ಸಮ ವ್ಯವಸ್ಥಿತ ಯೋಜನೆಯ ಮೂಲಕ, ಅಂದರೆ ಸಾಹಿತ್ಯ ಮತ್ತು ಚಿತ್ರಕಲೆ ಇವು ಎರಡು ಜೋಡಿ ಎತ್ತಿನಂತೆ ಜೊತೆಗೂಡಿ ಬೇಸಾಯದೊಂದಿಗೆ ಉತ್ತಮ ಬೆಳೆಯನ್ನು ತೆಗೆಯುವಂತೆ ಉತ್ತಮ ಕಲಾವಂತರನ್ನು ಸೃಷ್ಠಿಸುವಂತ ವ್ಯವಸ್ಥೆಯೊಂದಿಗೆ ಕಲಾಶಿಕ್ಷಣವಾಗಬೇಕು ವಿವಿಧ ಚಿತ್ರಕಲಾ ಪುಸ್ತಕಗಳಲ್ಲಿ, ಚಿತ್ರಪಟಗಳಲ್ಲಿ ಚಿತ್ರಗಳನ್ನು ನೋಡಿ ಅನುಕರಿಸುವ ಮೂಲಕ ಅನುಕರಣೆಯ ಚಿತ್ರಾಭ್ಯಾಸ, ವಿವಿಧ ವಸ್ತುಗಳನ್ನು ಗ್ರಹಿಸುವ ಮೂಲಕ ಹಂತ ಹಂತವಾಗಿ ವಸ್ತುಗಳ ಆಕಾರ, ಅಳತೆ, ಪ್ರಮಾಣಗಳ ಪ್ರತ್ಯಕ್ಷ ಪ್ರಾಯೋಗಿಕ ವೀಕ್ಷಣಾ ಚಿತ್ರಾಭ್ಯಾಸ, ನಂತರ ಚಿಂತನ ಚಿತ್ರಾಭ್ಯಾಸದಲ್ಲಿ ನೋಡಿದ ಚಿತ್ರ ಹಾಗು ವಸ್ತುಗಳ ಸ್ಮರಣ ಚಿತ್ರಾಭ್ಯಾಸದೊಂದಿಗೆ ಬದುಕಿನ ವಿವಿಧ ಕುಶಲತೆಗೆ ಅನ್ವಯಿಸುವಂತೆ ವಿವಿಧ ವಸ್ತುಗಳ ವಿನ್ಯಾಸದ ಜೋಡಣೆಯ ಬಗ್ಗೆಯೂ ಪ್ರತ್ಯೇಕ ಪೂರ್ವಾನುಭವದ ತರಬೇತಿಯೂ ಆಗಬಲ್ಲದು.
ಭಾಷಾ ಕಲಿಕೆ ಕೇವಲ ಸಾಹಿತ್ಯ ರಚನೆಯ ಸಾಮರ್ಥ್ಯಕ್ಕಾಗಿ ಅಲ್ಲ, ಬದುಕಿನಲ್ಲಿ ವ್ಯವಹಾರಿಕ ಉದ್ಯೋಗಕ್ಕೆ ಎಷ್ಟು ಅತ್ಯಾವಶ್ಯಕವೋ, ಹಾಗೆಯೇ ಬದುಕಿನಲ್ಲಿ ಪ್ರತಿ ವಸ್ತುವಿನಲ್ಲಿ ಸಿದ್ಧತೆಯ ಹಂತದಲ್ಲಿ ಯಾವುದೇ ವಸ್ತುಗಳ ಆಕಾರ, ಅಳತೆ, ಪ್ರಮಾಣಗಳ ಕಲ್ಪನೆಯಿಂದಲೇ ವಸ್ತುಗಳ ವಿನ್ಯಾಸದ ಪರಿವರ್ತನೆಗೂ ಚಿತ್ರ ರಚನಾ ಸಾಮರ್ಥ್ಯವು ಅಷ್ಟೇ ಅತ್ಯಾವಶ್ಯಕವಾಗಿದೆ. ಕಲ್ಲು, ಮರ, ಮಣ್ಣು, ವಿವಿಧ ಲೋಹ, ಗಾಜು, ಪ್ರಕೃತಿ ವಸ್ತುಗಳು, ವಿವಿಧ ಬಣ್ಣದ ಕಾಗದಗಳು, ಕಚ್ಚಾ ವಸ್ತುಗಳು ಇವುಗಳಿಂದ ಸುಂದರ ವಿವಿಧ ಅಲಂಕಾರಿಕ ವಸ್ತುಗಳು, ಮಾನವ ನಿರ್ಮಿತ ವಸ್ತುಗಳು, ಸುಂದರ ಮೂರ್ತಿಗಳು, ಶಿಲ್ಪಗಳು ಹಾಗೆಯೇ ವಾಹನಗಳು, ವಿವಿಧ ಯಂತ್ರೋಪಕರಣಗಳು, ಬಟ್ಟೆಗಳಿಂದ ಸಿದ್ಧ ಉಡುಪುಗಳು, ಚಿತ್ರಪಟ, ಜಾಹಿರಾತುಗಳು, ನಾಮಪಲಕಗಳು, ಬ್ಯಾನರ್ ಗಳ ರಚನೆ, ವಿವಿಧ ರೀತಿಯಲ್ಲಿ ನಿರ್ಮಿಸುವ ಸುಂದರ ಕಟ್ಟಡಗಳು ಇತ್ಯಾದಿ ಯಾವುದೇ ವಸ್ತುಗಳು ಆಕಾರ, ಅಳತೆ, ಪ್ರಮಾಣಗಳ ಕಲ್ಪನೆಯಿಲ್ಲದೆ ವಿನ್ಯಾಸದಲ್ಲಿ ಪರಿವರ್ತನೆ ಮತ್ತು ಹೊಸ ರೂಪದ ವಸ್ತುಗಳ ತಯಾರಿಕೆ ಕಷ್ಟಸಾಧ್ಯ, ಹಾಗೆಯೇ ಸಾಹಿತ್ಯದ ರಚನೆ, ಸಂಗೀತ, ಅಭಿನಯ, ನೃತ್ಯ ಅಲ್ಲದೆ ಚಲನಚಿತ್ರಗಳಲ್ಲಿ ನಿರ್ದೇಶನ, ದೃಶ್ಯಚಿತ್ರಗಳ ಶೋಧನೆ, ಸಂಯೋಜನೆ, ತಾಂತ್ರಿಕ ವರ್ಗ ಹಾಗು ಛಾಯಾಗ್ರಹಣ ಇವು ಯಾವುವೂ ಆಕಾರಗಳ ಕಲ್ಪನೆಯಿಲ್ಲದೆ ಉತ್ತಮ ನಿರ್ಮಾಣವಾಗಲಿ, ನಟನೆಯಾಗಲಿ, ಕೃತಿಯಾಗಲಿ ಸೃಷ್ಠಿಯಾಗುವುದು ಕಷ್ಟಸಾಧ್ಯ. ಇಷ್ಟೇ ಏಕೆ ನಂಬಿಕೆ ಇಟ್ಟಿರುವ ಭವಿಷ್ಯದ ಗ್ರಹಿಕೆಯೂ ಕೂಡ ಹಸ್ತದ ರೇಖೆ, ಆಕಾರಗಳಿಂದಲ್ಲವೇ? ಎಂಥಹುದೇ ಸಾಂದರ್ಭಿಕ ಸಂಧಿಗ್ಧ ಸಮಸ್ಯೆಯ ಪರಿಹಾರದ ಇತರೆ ಯಾವುದೇ ಉದ್ಯೋಗವು ಸಹ ಆಕಾರಗಳ ಕಲ್ಪನೆ ಇಲ್ಲದೆ ನಡೆಸಲು ಸಾಧ್ಯವೇ? ಒಟ್ಟಿನಲ್ಲಿ ಮಾನವ ನಿರ್ಮಿಸುವ ಯಾವುದೇ ವಸ್ತುಗಳು ಆಕಾರಗಳ ಕಲ್ಪನೆಗಳು ಕೇವಲ ಆಸಕ್ತಿ ಮತ್ತು ಕಲೆಗಾರಿಕೆ ಇರುವ ಕೆಲವೇ ವ್ಯಕ್ತಿಗಳ ಕೈವಶವಾಗುವುದಕಿಂತ ಭಾಷಾ ಕಲಿಕೆಯಂತೆ ಚಿತ್ತಾರ ಕಲೆಯ ಪ್ರಾರಂಭಿಕ ಅಭ್ಯಾಸದಿಂದ ಪ್ರತಿಯೊಬ್ಬ ವ್ಯಕ್ತಿಗೂ ಸಾಂದರ್ಬಿಕ ಕುಶಲತೆ ಸೃಷ್ಠಿಯಾದರೆ ರಾಷ್ಟ್ರದ ಸಮಗ್ರ ಏಳಿಗೆಗೆ ಉತ್ತಮ ಅವಕಾಶವಾದಂತಲ್ಲವೇ?
ಎಳೆಯ ಮಕ್ಕಳ ಮನಸ್ಸಿಗೆ ಎಳೆ ಎಳೆಯಾಗಿಯೇ ಹೆಚ್ಚು ಹೊರೆಯಾಗದಿರುವಂತೆ ಶೀಘ್ರವಾಗಿ ಮನಕ್ಕೆ ನಾಟಲು ಪ್ರಾರಂಭಿಕ ಅನುಭವ ಮತ್ತು ಅಭ್ಯಾಸಗಳು ಮಾತೃಭಾಷೆ ಹಾಗು ಚಿತ್ರಕಲೆಯ ಪ್ರಾರಂಭಿಕ ಅಭ್ಯಾಸದೊಂದಿಗೆ ಉತ್ತಮ ಕುಶಲತೆಗೆ ಅನುವಾಗುವಂತೆ ಪ್ರಾರಂಭಿಕ ಮೂಲಾಂಶಗಳನ್ನು ಅಳವಡಿಸಿಕೊಂಡು, ಅಕ್ಷರ ಜ್ಞಾನ, ಪದರಚನೆ ಸಾಮರ್ಥ್ಯ, ವಾಕ್ಯ ರಚನೆಯ ಸಾಮರ್ಥ್ಯದ ಅಡಿಪಾಯಕ್ಕೆ ಅನುಕೂಲವಾಗುವಂತೆ ಓದುವ ಮತ್ತು ಬರೆಯುವ ಅಭ್ಯಾಸ, ಹಾಗೆಯೇ ವಿವಿಧ ರೇಖೆಗಳ, ಆಕಾರ, ಆಕೃತಿಗಳ ಅಭ್ಯಾಸ ಇವು ಒಂದು ನಿರ್ಧಿಷ್ಟ ಹಂತದೊಳಗೆ ಪೂರೈಸುವ ವ್ಯವಸ್ಥಿತವಾದಲ್ಲಿ ಭಾಷಾ ಕುಶಲತೆ ಮತ್ತು ವಸ್ತುಚಿತ್ರ ರಚನಾ ಸಾಮರ್ಥ್ಯಕ್ಕೆ ಪುರ್ವಾನುಭವವು ಆಗಬಲ್ಲದು ಮತ್ತು ತರಗತಿಯ ಎಲ್ಲ ಮಕ್ಕಳಿಗೂ ಚಾಚೂ ತಪ್ಪದೆ ಸಂಬಂಧಿಸಿದ ಜ್ಞಾನವನ್ನು ನೀಡಲು ಸಾಕಷ್ಟು ಸಮಯ ಅವಕಾಶವೂ ದೊರೆಯಬಲ್ಲದು.
ಆದಿ ಮಾನವನಿಗೂ ಮೊದಲು ಜ್ಞಾನೋದಯವಾದದ್ದು ಚಿತ್ತಾರದ ಕಲೆಯಿಂದಲೇ, ಸೇವಿಸುವ ಆಹಾರ, ಬಟ್ಟೆ, ವಸತಿ ಇತ್ಯಾದಿಗಳ ತಯಾರಿಕೆಯ ಜ್ಞಾನಕಿಂತಲೂ ಮುಂಚಿತವಾಗಿ ಆತನಿಗೆ ಬಿಡುವಿನ ಸಮಯದಲ್ಲಿ ಆತನ ದೃಷ್ಟಿ ಹರಿದದ್ದು ಗಿಡ, ಮರ, ಪಕ್ಷಿ, ಪ್ರಾಣಿ ಹಾಗು ತನ್ನಂತೆ ಮನುಷ್ಯರ ನೆರಳು. ಈ ನೆರಳುಗಳು ಆತನಿಗೆ ಚೆಂದವೆನಿಸಿ ಹಾಗೆ ಉಳಿಸಿಕೊಲ್ಲಬೇಕೆನಿಸಿತು. ಉಪಾಯ ಹೊಳೆಯಿತು, ಚೂಪಾದ ಕಲ್ಲನ್ನು ತೆಗೆದುಕೊಂಡ, ಒಬ್ಬ ವ್ಯಕ್ತಿಯನ್ನು ನಿಲ್ಲಿಸಿದ, ನೆರಳಿನ ಅಂಚಿನ ತುದಿಯನ್ನು ಹಾಗೆ ಕೊರೆದ, ವ್ಯಕ್ತಿಯನ್ನು ಬಳಿಗೆ ಸರಿಸಿ ನೋಡಿದ, ಅಲ್ಲಿ ಒಂದು ಚಿತ್ರ ಸೃಷ್ಟಿಯಾಯಿತು. ನಂತರವೇ ಈ ಅನುಭವದಿಂದಲೇ ಕಲ್ಲಿನ ಬಂಡೆಯ ಮೇಲೆ ಚಿತ್ತಾರ ಬಿಡಿಸುವ ಸಂದರ್ಭದಲ್ಲಿ ಕಲ್ಲಿನಿಂದ ಕಲ್ಲಿಗೆ ಕೊರೆಯುವಾಗಲೋ ಅಥವಾ ಜಜ್ಜುವಾಗಲೋ ಬೆಂಕಿಯ ಸೃಷ್ಟಿ, ಹೀಗೆ ಆಕಾರ ಅನುಭವದಿಂದ ಮತ್ತು ಕ್ರಿಯೆಯ ಅನುಭ ವದಿಂದ ವಿವಿಧ ವಸ್ತುಗಳ ತಯಾರಿಕೆ ಹಾಗು ಆಹಾರ ಬೇಯಿಸಿಕೊಳ್ಳುವ ಅನುಭವಕ್ಕೆ ಮಾರ್ಗವಾದವು ಎಂಬುದಕ್ಕೆ ಸಾಕ್ಷಿಯು ಆಗಬಲ್ಲವು ಮತ್ತು ಇವು ಕೇವಲ ಕಲ್ಪನೆ ಎಂದಷ್ಟೇ ಹೇಳಲು ಸಹ ಯಾವ ಆಧಾರವಿಲ್ಲದೆಯೂ, ಮತ್ತು ಇದು ಸತ್ಯಾಂಶವಲ್ಲ ಎಂದು ಅಲ್ಲಗಳೆಯಲು ಸಾಧ್ಯವಿಲ್ಲವಾದೀತು. ವಿಜ್ಞಾನ, ತಂತ್ರಜ್ಞಾನ ಮತ್ತು ಚಿಂತನೆ (ಕಲೆ) ಇವುಗಳ ಬಗ್ಗೆ ಕಿಂಚಿತ್ತು ಹೆಸರಿನ ಕಲ್ಪನೆಯೂ ಇಲ್ಲದ ಅಂದು ಸಹ ಈ ಚಿತ್ರ ಕೃತಿಯ ಸಂದರ್ಭದಲ್ಲಿಯು ಈ ಮೂರೂ ತಾತ್ವಿಕ ಅಂಶಗಳು ಸಂಯೋಜನೆಗೊಂಡು ನಡೆದದ್ದು ಕಲಾತ್ಮಕ ಕ್ರಿಯೆಯು ಹೌದು. ಆಕಾರ, ಅಳತೆ, ಪ್ರಮಾಣಗಳೊಂದಿಗೆ ಗಮನ ಸೆಳೆಯುವಂತ ನೆರಳುಗಳ ರೂಪ ಶೋಧನಾತ್ಮಕವಾಗಿ ಕಂಡದ್ದು ವೈಜ್ಞಾನಿಕ ಮನೋಬಾವನೆ, ಇದನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಉಪಾಯ (ಚೂಪಾದ ಕಲ್ಲಿನಿಂದ ಕೊರೆಯುವ) ವನ್ನು ಕಂಡುಕೊಂಡದ್ದು ತಂತ್ರಜ್ಞಾನ ಹಾಗೆಯೇ ಯಥಾವತ್ತಾಗಿ ನೆರಳಿನ ರೂಪವನ್ನು ಒಂದು ಚಿತ್ರ ಕೃತಿಯಾಗಿ ಆಗುವ ಪರಿವರ್ತನೆಯೊಂದಿಗೆ ರಚಿತವಾದದ್ದು ಚಿತ್ತಾರದ (ಚಿಂತನೆ) ಕಲೆ. ವೈಜ್ಞಾನಿಕ ಭಾವನೆ ಅಪೂರ್ಣ, ತಂತ್ರಜ್ಞಾನ ಅಪೂರ್ಣ ಈ ಎರಡು ಹಂತಗಳ ಜ್ಞಾನಗಳಿಗೆ ಸಂಬಂಧಿಸಿದ ಆಕಾರಗಳೊಂದಿಗೆ ಪರಿ ಪೂರ್ಣ ಗೊಳಿಸುವ ಸಾಮರ್ಥ್ಯವಿರುವುದು ಚಿತ್ರ ಜ್ಞಾನಕ್ಕೆ ಮಾತ್ರ, ಅದೇ ಚಿಂತನಾ ಸಾಮರ್ಥ್ಯ ಅಂದರೆ ಚಿತ್ತಾರದ ಕಲೆ. ಆಕಾರ ಅನುಭವದಿಂದಲೇ ನಂತರ ನಿತ್ಯ ಬಳಕೆಯ ವಸ್ತುಗಳನ್ನು ಕಾಲ್ಪನಿಕವಾಗಿ ಬಯಸಿದ ಆಕಾರಗಳನ್ನು ಸೃಷ್ಟಿಸಿಕೊಳ್ಳುವ ಮೂಲಕ ವಿನ್ಯಾಸದಲ್ಲಿ ಪರಿವರ್ತನೆ ಗೊಳಿಸಿಕೊಳ್ಳುತ್ತಾ ಮಾನವ ನಿರ್ಮಿತ ವಸ್ತುಗಳೆಲ್ಲವೂ ನಿರ್ಮಾಣಗೊಳ್ಳುತ್ತಾ ಬಂದಿವೆ. ಆದರೆ ಈ ವಿನ್ಯಾಸಗಳ ಕುಶಲತೆ ಪ್ರಾರಂಭಿಕ ಅಭ್ಯಾಸದ ಯಾವ ಪುರ್ವಾನುಭವವೂ ಇಲ್ಲದೆ ವ್ಯಕ್ತಿಯಿಂದ ವ್ಯಕ್ತಿಗೆ ಕೇವಲ ಕಾಲ್ಪನಿಕ ಅನುಕರಣೀಯ ಮೂಲಕ ಸಾಗಿ ಬಂದಿ ರುವುದರಿಂದಲೇ ಇಂತಹ ಕುಶಲತೆಯ ಗುಣಮಟ್ಟ ವ್ಯಕ್ತಿಯ ಪ್ರುಢಶಾಲಾ ಹಂತಕ್ಕೂ ಸಹ ನಿಲುಕದೆ ಮತ್ತು ಕೇವಲ ಆಸಕ್ತಿಯಿರುವ ಕೆಲವೇ ವ್ಯಕ್ತಿಗಳ ಕೈವಶವಾಗುತ್ತಿದೆ. ಇಂತಹ ಕುಶಲತೆಯು ಮುಂದಿನ ಯಾವುದೇ ವೃತ್ತಿ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣಕ್ಕೂ ಇವುಗಳಿಗೆ ಪುರ್ವಾನುಭವದ ಪ್ರಾರಭಿಕ ಅಭ್ಯಾಸ ಆಗುವುದರೊಂದಿಗೆ ಅತ್ಯಾವಶ್ಯಕವಾಗಿರುವುದರಿಂದಲೂ ಮತ್ತು ಕೇವಲ ಭಾಷಾ ರೂಪದಲ್ಲಿ ಈ ಕುಶಲತೆಯು ಮಕ್ಕಳಿಗೆ ಲಭ್ಯವಾಗುವುದು ಕಷ್ಟ ಸಾಧ್ಯವಾಗುವುದರಿಂದಲೂ ಸುಲಭ ರೂಪದ ಚಿತ್ತಾರ ಕಲೆಯ ಪ್ರಾರಂಭಿಕ ಅಭ್ಯಾಸದಲ್ಲಿ ಕುಶಲತೆಯು ಶೀಘ್ರ ಬೆಳವಣಿಗೆಯೊಂದಿಗೆ ಕಲಾ ಶಿಕ್ಷಣದ ಮೂಲಕ ದೊರೆಯಬಲ್ಲದು.
ಗೀಚು ಗೆರೆಯಿಂದ ಚಿತ್ರ
ಚಿತ್ರದಿಂದ ಚಿತ್ರಲಿಪಿ
ಚಿತ್ರಲಿಪಿಯಿಂದ ಚಿತ್ರಕಲೆ
ಚಿತ್ರಕಲೆಯಿಂದ ಸರ್ವ ಜ್ಞಾನಪ್ರಾಪ್ತಿ.
ಪ್ರತಿ ಒಂದೊಂದು ರೇಖೆಯು ಆಯಾ ಸಂದರ್ಭಕ್ಕೆ ಅನುಸಾರವಾಗಿ ತನ್ನದೇ ಆದ ಸ್ವರೂಪವನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದು ಕೇವಲ ಕೆಲವೇ ರೇಖೆಗಳ ಜೋಡನೆಗಳ ಮೂಲಕ ಬಯಸಿದ ಯಾವುದೇ ವಸ್ತುವಿನ ಸ್ಪಷ್ಟ ಸ್ವರೂಪವನ್ನು ಸೂಚಿಸುತ್ತದೆ
ಉದ್ಯೋಗಕ್ಕಾಗಿ ಅನ್ಯ ಅಂತರ ರಾಷ್ಟ್ರೀಯ ಆಂಗ್ಲ ಭಾಷೆಯನ್ನು ಕಲಿಯಲೇ ಬೇಕಾಗುತ್ತದೆ ಎಂದಾದಲ್ಲಿ (ಇಂತಹ ಒಂದು ಮಾನಸಿಕ ಕಲ್ಪನೆಗೆ ಅವಲಂಬಿತರಾಗುವುದರಿಂದ ಹಾಗೆಯೇ ಸರ್ಕಾರದ ಯಾವುದೇ ನೀತಿ ನಿಯಮಗಳು ಜಾರಿಯಿಲ್ಲದಿದ್ದಲ್ಲಿ) ಮುಂದೊಂದು ಕಾಲಕ್ಕೆ ಎಲ್ಲ ಮಾತೃ ಭಾಷೆಗಳು ಕ್ಷೀಣಿಸುತ್ತಾ ಇಡೀ ವಿಶ್ವದಲ್ಲೆಲ್ಲ ಪೂರ್ಣ ಆಂಗ್ಲ ಭಾಷೆಯೇ ಮಾತೃ ಭಾಷೆಯಾಗಬಹುದಲ್ಲವೇ? ಮಾತೃಭಾಷೆ, ರಾಜ್ಯಭಾಷೆ, ರಾಷ್ಟ್ರೀಯ ಭಾಷೆ ಹಾಗು ಅಂತರ ರಾಷ್ಟ್ರೀಯ ಭಾಷೆಗಳು ಇವುಗಳ ಸ್ಥಾನಮಾನಗಳನ್ನು ಗೌರವಾನ್ವಿತವಾಗಿ ಉಳಿಸಿಕೊಳ್ಳಲು ಮತ್ತು ಭಾಷೆಗಳು ಒಂದಕ್ಕೊಂದು ಸಮನ್ವಯ ರೀತಿಯಲ್ಲಿ ನಡೆದುಕೊಳ್ಳಲು, ಆಯಾ ರಾಜ್ಯ ಭಾಷಾ ಕಲಿಕೆಗೆ ಪ್ರಥಮ ಆದ್ಯತೆ ನಂತರ ಇತರೆ ಭಾಷಾವಾರು ಮೀಸಲಾತಿಯ ನಿಯಮವನ್ನು ಜಾರಿಗೊಳಿಸಿ ಸರ್ಕಾರ ಪಾಲಿಸುತ್ತಾ ನಡೆದಲ್ಲಿ ಯಾವ ಭಾಷೆಗಳು ಅಳಿಯಲು ಅವಕಾಶವಾಗದಂತೆ ಸಾಗಬಲ್ಲವು.
ಶಿಕ್ಷಣದಲ್ಲಿ ಮೊದಲ ಆದ್ಯತೆ ಬದುಕಿನ ಕುಶಲತೆಗೆ ಅಂದರೆ ಚಿತ್ರಕಲೆ, ಜೊತೆಗೆ ಶಾಸ್ತ್ರ ತಾತ್ವಿಕ ಅಂಶಗಳ, ಸಂಸ್ಕೃತಿಯ ಮತ್ತು ಸಾಂಸ್ಕೃತಿಕ ಹೆಚ್ಚಿನ ಅಧ್ಯಯನಕ್ಕಾಗಿ ರಾಜ್ಯಭಾಷಾ ಕಲಿಕೆ, ನಂತರ ವ್ಯವಹಾರ ಭಾಷೆಗೆ ಆದ್ಯತೆ ನೀಡಿದಲ್ಲಿ, ಪ್ರವೃತ್ತಿ, ವೃತ್ತಿ ಹಾಗು ಸಂಸ್ಕೃತಿ ಇವುಗಳ ಕುಶಲತೆ ತಾನಾಗಿಯೇ ಪ್ರತಿ ವ್ಯಕ್ತಿಗೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಲಭ್ಯವಾಗಬಲ್ಲದು.
ಮುಂದಿನ ಹಂತ ಅಂದರೆ ಮಾತೃ ಭಾಷಾ ಕಲಿಕೆಗೆ ಸುಲಭ ರೂಪದಲ್ಲಿ ಭಾಷಾ ಜ್ಞಾನದ ಪ್ರಾರಂಭಿಕ ಅಭ್ಯಾಸ, ಚಿತ್ರ ರಚನಾ ಸಾಮರ್ಥ್ಯಕ್ಕೆ ಅನುವಾಗುವಂತೆ ವಸ್ತುಚಿತ್ರಕ್ಕೆ ಪ್ರಾರಂಭಿಕ ಅಭ್ಯಾಸದ ಮುಂದಿನ ಹಂತದ ಘನಾಕೃತಿ ಹಾಗು ಪೂರ್ಣ ವಸ್ತುಚಿತ್ರ ರಚನಾ ಅಭ್ಯಾಸದ ಪ್ರಾರಂಭ, ಹಾಗೆಯೇ ಈ ಹಂತದ ಜೊತೆಗೆ ಯಾವುದೇ ಅನ್ಯ ವ್ಯವಹಾರ ಭಾಷೆಗಳ ಪ್ರಾರಂಭಿಕ ಅಭ್ಯಾಸ, ಅಂತೆಯೇ ವ್ಯವಹಾರ ಭಾಷೆಯಲ್ಲಿಯು ಹೆಚ್ಚು ಅನ್ಯ ಅನಾವಶ್ಯಕ ವಿಷಯಗಳನ್ನು ಅಳವಡಿಸದೆ ಕೇವಲ ವ್ಯವಹಾರ ಜ್ಞಾನಕ್ಕೆ ತಕ್ಕ ಅಂಶಗಳನ್ನು ಅಳವಡಿಸಿಕೊಳ್ಳುತ್ತಾ ಅಭ್ಯಾಸ ನಡೆದುಕೊಂಡು ಹೋದಲ್ಲಿ ಹಂತ ಹಂತವಾಗಿ ವ್ಯವಹಾರ ಭಾಷೆಯನ್ನು ಕಲಿಯುತ್ತಾ, ಮಾತೃಭಾಷೆ ಮತ್ತು ಚಿತ್ರಕಲೆಗೆ ಪ್ರಾರಂಭಿಕ ಅಭ್ಯಾಸವು ಸಹ ಯಾವುದೇ ಅನ್ಯ ಭಾಷೆಯಿಂದ ಆಗುವ ಅಡೆತಡೆಗಳಿಲ್ಲದೆ ಸ್ವರಚನಾ ಸಾಮರ್ಥ್ಯಕ್ಕೆ ತಕ್ಕ ಪುರ್ವಾನುಭವದ ಅಭ್ಯಾಸ ಸಾಕಷ್ಟು ಆಗುವುದರಿಂದಲೂ, ಮಾತೃ ಭಾಷಾ ಕುಶಲತೆ, ಚಿತ್ರರಚನಾ ಕುಶಲತೆ ಹಾಗು ವ್ಯವಹಾರ ಭಾಷೆಗಳು ಸಹ ಯಾವುದಕ್ಕೂ ದಕ್ಕೆಯಾಗದೆ ಸುಗಮವಾಗಿ ಕಲಿಕೆಯ ಅಭ್ಯಾಸ ನಡೆಯಬಲ್ಲದು.